ಕೊಡಗು ಜಿಲ್ಲೆಯ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ಹೋಗಿದ್ದ ಶರಣ್ಯ ಜಿ.ಎಸ್. (36) ಎಂಬ ಯುವತಿ ನಾಲ್ಕು ದಿನಗಳ ಕಾಲ ಅರಣ್ಯದಲ್ಲಿ ದಾರಿ ತಪ್ಪಿ, ಏಪ್ರಿಲ್ 5ರ ಭಾನುವಾರ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಇವರು ಕೇರಳದ ಕೋಯಿಕ್ಕೋಡ್ ಜಿಲ್ಲೆಯ ನಾದಪುರಂ ಮೂಲದವರಾಗಿದ್ದು, ಕೊಚ್ಚಿಯಲ್ಲಿ ಐಟಿ ಉದ್ಯೋಗಿಯಾಗಿದ್ದಾರೆ.
ಶರಣ್ಯ ಅವರು ಏಪ್ರಿಲ್ 2ರಂದು ಅರಣ್ಯ ಇಲಾಖೆಯ ಅನುಮತಿ ಪಡೆದು ತಡಿಯಂಡಮೋಳ್ಗೆ ಏಕಾಂಗಿ ಚಾರಣ ಪ್ರಾರಂಭಿಸಿದ್ದರು. ಆದರೆ ಅಧಿಕಾರಿಗಳು ಅವರ ವಿವರ ದಾಖಲಿಸಿಕೊಂಡು, ಪ್ರದೇಶದಲ್ಲಿ ಕಾಡಾನೆಗಳು ಇರುವುದರಿಂದ ಗುಂಪಾಗಿ ಚಾರಣ ಕೈಗೊಳ್ಳುವಂತೆ ಸಲಹೆ ನೀಡಿದ್ದರು. ಹಾಗಾಗಿ ಅವರು ಸುಮಾರು 10 ಚಾರಣಿಗರ ಗುಂಪನ್ನು ಸೇರಿಕೊಂಡಿದ್ದರು.
ಏಪ್ರಿಲ್ 2ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ತಾವು ದಾರಿ ತಪ್ಪಿರುವ ಬಗ್ಗೆ ಹೋಂ ಸ್ಟೇ ಸಿಬ್ಬಂದಿಗೆ ಶರಣ್ಯ ಫೋನ್ ಮೂಲಕ ಮಾಹಿತಿ ನೀಡಿದ್ದರು. ಆದರೆ, ಅವರ ಫೋನ್ ನೆಟ್ವರ್ಕ್ ವ್ಯಾಪ್ತಿಯಿಂದ ಹೊರಗಿದ್ದರಿಂದ ಅವರೊಂದಿಗೆ ಸಂಪರ್ಕ ಕಡಿತಗೊಂಡಿತ್ತು.
ಅವರೊಂದಿಗೆ ಹೊರಟಿದ್ದ ಗುಂಪು ಸಂಜೆಯ ವೇಳೆಗೆ ಸುರಕ್ಷಿತವಾಗಿ ಹಿಂತಿರುಗಿದ್ದರು. ಶರಣ್ಯ ಅವರನ್ನು ಕೊನೆಯ ಬಾರಿಗೆ ಬೆಟ್ಟದ ತುದಿಯಲ್ಲಿ ನೋಡಿದ್ದೇವೆಂದು ಕೆಲವು ಚಾರಣಿಗರು ಮಾಹಿತಿ ನೀಡಿದ್ದರು. ನಾಯಿಯೊಂದಿಗೆ ಆಟವಾಡುತ್ತಿದ್ದ ಅವರು, ತಾನೊಬ್ಬಳೆ ಇಳಿಯುವುದಾಗಿ ಸೂಚಿಸಿದ್ದರು ಎಂದು ಅವರು ಹೇಳಿದ್ದಾರೆ.
ಕೇವಲ ಅರ್ಧ ಲೀಟರ್ ನೀರು ಹೊಂದಿದ್ದ ಶರಣ್ಯ, ಕಾಡಿನ ಹಳ್ಳವೊಂದರ ಬಳಿ ಆಶ್ರಯ ಪಡೆದಿದ್ದರು. ಡ್ರೋನ್ ಕಣ್ಣಿಗೆ ಬೀಳಲೆಂದು ಬಯಲು ಪ್ರದೇಶದಲ್ಲಿ ಕುಳಿತುಕೊಳ್ಳುತ್ತಿದ್ದರು. ಭಾನುವಾರ ಬೆಳಿಗ್ಗೆ ಅವರು ಮರವೊಂದರ ಮೇಲೆ ಕುಳಿತು ಸಹಾಯಕ್ಕಾಗಿ ಕೂಗಿದಾಗ, ಸ್ಥಳೀಯ ಆದಿವಾಸಿಗಳ ತಂಡ ಅವರನ್ನು ಪತ್ತೆಹಚ್ಚಿದೆ.
ಅರಣ್ಯ ಇಲಾಖೆ, ಪೊಲೀಸ್, ನಕ್ಸಲ್ ನಿರೋಧಕ ಪಡೆ ಮತ್ತು ಸ್ಥಳೀಯರು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಸಿಬ್ಬಂದಿ ಈ ಶೋಧ ಕಾರ್ಯದಲ್ಲಿ ತೊಡಗಿದ್ದರು. ಸದ್ಯ ಶರಣ್ಯ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಮಡಿಕೇರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

Comments
Post a Comment